ಬೆಳ್ತಂಗಡಿ : ದುರ್ಗಾ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ನಡ ಗ್ರಾಮ ಸಹಾಯಕ ಜಯರಾಜ್ (48ವ) ಸ್ಥಳದಲ್ಲೇ ಮೃತಪಟ್ಟ ಘಟನೆ ಜೂ.28ರಂದು ಪುತ್ರಬೈಲು ಎಂಬಲ್ಲಿ ನಡೆದಿದೆ.

ದುರ್ಗಾ ಬಸ್‌ನ ನಿರ್ಲಕ್ಷ್ಯಕ್ಕೆ ಗ್ರಾಮ ಸಹಾಯಕ ಬಲಿ – ಘಟನೆ ತಿರುಚಲು ನೋಡಿದ್ದಕ್ಕೆ ಸಾರ್ವಜನಿಕರ ಆಕ್ರೋಶ

ಕಿಲ್ಲೂರು ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತಿದ್ದ ದುರ್ಗಾ ಬಸ್ ಲಾಯಿಲ ಗ್ರಾಮದ ಪುತ್ರಬೈಲು ಬಳಿ ಎದುರಿನಿಂದ ಬರುತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಬೈಕ್ ಸವಾರ ಗ್ರಾಮ ಸಹಾಯಕ ಜಯರಾಜ್ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಅವರ ಮೃತ ದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಯಮರೂಪಿಯಾದ ದುರ್ಗಾ ಬಸ್ : ದುರ್ಗಾ ಬಸ್ ಅಪಘಾತವಾಗಿ ಜನರ ಜೀವ ಬಲಿ ಪಡೆಯುತ್ತಿರುವುದು ಇದು ಮೊದಲೇನಲ್ಲ ಈ ಹಿಂದೆಯೂ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಅಮಾಯಕರನ್ನು ಬಲಿಪಡೆದ ಇತಿಹಾಸವಿದೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಮಂಜೊಟ್ಟಿಯಲ್ಲಿ ದುರ್ಗಾ ಬಸ್ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು ಸಾವರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಇನ್ನೊಂದು ಬಲಿ ಪಡೆದಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಬಸ್ ಮೇಲೆ ನಿಗಾ ವಹಿಸಿ ಅಮಾಯಕರು ಬಲಿಯಾಗುವುದನ್ನು ತಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.