ಬೆಳ್ತಂಗಡಿ : ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡ ಘಟನೆ ಮಾ.27 ರಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಮುರದಮೇಲು ಎಂಬಲ್ಲಿ ಮಾ.27 ರಂದು ಬೆಳಿಗ್ಗೆ ಸುಮಾರು 10:15 ಗಂಟೆ ವೇಳೆಗೆ ಕೋಳಿಗಳ ಕಾಲುಗಳಿಗೆ ಹಿಂಸಾತ್ಮಕವಾಗಿ ಬಾಳು (ಸಣ್ಣ ಕತ್ತಿ) ಕಟ್ಟಿ ಅವುಗಳನ್ನು ಎದುರು-ಬದುರಾಗಿ ಹಾರಿಸಿ ಕಾದಾಟ ಮಾಡಲು ಬಿಟ್ಟು ಹಣವನ್ನು ಪಣವಾಗಿಟ್ಟುಕೊಂಡು ಸಂಘಟನಾತ್ಮಕವಾಗಿ ಕೋಳಿ ಅಂಕ ಜೂಜಾಟವಾಡುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್ ಗಾಣಿಗೇರ ನೇತೃತ್ವದ ಎ.ಎಸ್.ಐ. ಪೌಲೋಸ್ ತಂಡದ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ದಾಳಿ ವೇಳೆ 4 ಆರೋಪಿಗಳಾದ ಪ್ರಶಾಂತ್, ಶಶಿಕುಮಾರ್, ಹೊನ್ನಪ್ಪ ಗೌಡ, ಜನಾರ್ಧನ ಎಂಬವರನ್ನು ವಶಕ್ಕೆ ಪಡೆದು ಅವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ರೂ 2250 ರೂಪಾಯಿ ಹಣ, 2 ಬಾಳು (ಸಣ್ಣ ಕತ್ತಿ) ಅಂದಾಜು ಮೌಲ್ಯ ರೂ 50 ರೂಪಾಯಿ, 4 ಪ್ಲಾಸ್ಟಿಕ್ ಚೀಲ (ಬೆಲೆ ಬಾಳುವುದಿಲ್ಲ), ಕೆಂಪು ಹುರಿಯ ಜಾತಿಯ 4, ಮೈಪ ಜಾತಿಯ 4, ಬೊಳ್ಳೆ ಜಾತಿಯ 1, ನೀಲ ಜಾತಿಯ 2, ಮಂಜಲ ಜಾತಿಯ 1, ಕಾವೆ ಜಾತಿಯ 2 ಕೋಳಿಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾಧೀನಪಡಿಸಿಕೊಂಡ ನಗದು ರೂ 2250, 14 ಕೋಳಿಗಳ ಅಂದಾಜು ಮೌಲ್ಯ 6700 ರೂಪಾಯಿ, ಬಾಳು (ಸಣ್ಣ ಕತ್ತಿ) ಅಂದಾಜು ಮೌಲ್ಯ 50 ರೂಪಾಯಿ ಆಗಿದ್ದು ಸ್ವಾಧೀನಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂ 9000 ರೂಪಾಯಿ ಅಗಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಲಂ 112 BNS & 87 KP Act R/w 11(1)(m)(ii),11(1)(n),Prevention of Animal cruelty Act -1960 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ ಸಿ.ಕೆ. ಮತ್ತು ವೃತ್ತ ನಿರೀಕ್ಷಕ ರವಿ ಬಿ.ಎಸ್. ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್ ಗಾಣಿಗೇರ ನೇತೃತ್ವದ ತಂಡ ದಾಳಿ ಕಾರ್ಯಾಚರಣೆ ಭಾಗವಹಿಸಿದರು.