ಬೆಳ್ತಂಗಡಿ: ಅನಧಿಕೃತವಾಗಿ ಯಾವುದೇ ಅನುಮತಿ ಇಲ್ಲದೆ ಕಟ್ಟಡದ ಕಾಮಗಾರಿ ಮಾಡುತ್ತಿರುವುದಕ್ಕೆ ಪಟ್ಟಣ ಪಂಚಾಯತ್ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಯಾವುದೇ ಕಾನೂನು ಪಾಲಿಸದೆ ಮತ್ತೆ ಕಾಮಗಾರಿ ಮಾಡುತ್ತಿರುವುದಕ್ಕೆ ಪಟ್ಟಣ ಪಂಚಾಯತ್ ’ಡಾಲಿ’ ಕಟ್ಟಡದ ಮಾಲೀಕರಿಗೆ ಅಂತಿಮ ನೋಟಿಸ್ ಜಾರಿ ಮಾಡಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಳೆಕೋಟೆ ಬಳಿಯ ಸಾಯಿಮಂದಿರದ ಮುಂಭಾಗದಲ್ಲಿ ’ವಲೇರಿಯನ್ ಪಾಯಸ್’ ಎಂಬವರಿಗೆ ಸೇರಿದ ‘ಡಾಲಿ’ ಹೆಸರಿನ ಕಟ್ಟಡದಲ್ಲಿ ಅನುಮತಿ ಇಲ್ಲದೆ ಅನಧಿಕೃತವಾಗಿ ಕೆಲಸವನ್ನು ಕಳೆದ ಜನವರಿ ತಿಂಗಳಿಂದ ರಾಜರೋಷವಾಗಿ ಮಾಡುತ್ತಿದ್ದರು. ಈ ಬಗ್ಗೆ ದೂರು ಬಂದ ಮೇರೆಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ರೂ ಕ್ಯಾರೆ ಮಾಡದೆ ಮತ್ತೆ ಕಾನೂನು ಮೀರಿ ಕಾಮಗಾರಿ ಮುಂದುವರಿಸಿದ್ದರಿಂದ ಜು.29 ರಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾದ ರಾಜೇಶ್ ಕೆ. ಅವರು ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ.ಅನಧಿಕೃತ/ಅಕ್ರಮವಾಗಿ ಈ ಮೊದಲು ‘ಡಾಲಿ’ ಕಟ್ಟಡದ ಕಾಮಗಾರಿ ಮಾಡುತ್ತಿದ್ದ ಬಗ್ಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧಿಕಾರಿಗಳು 28-01-2026 ಮತ್ತು 14-05-2026 ದಿನಾಂಕಗಳಂದು ನೋಟಿಸ್ ಜಾರಿ ಮಾಡಿದ್ದರೂ ಕೂಡ ಕಾನೂನಿಗೆ ಕ್ಯಾರೆ ಮಾಡದೆ ಅಕ್ರಮ ಕೆಲಸವನ್ನು ಮುಂದುವರಿಸಿದ್ದ ‘ಡಾಲಿ’ ಕಟ್ಟಡದ ಮಾಲೀಕ ವಲೇರಿಯನ್ ಪಾಯಸ್ ವಿರುದ್ಧ ಪರವಾನಿಗೆ ಪಡೆಯದೆ ನಿರ್ವಹಿಸುತ್ತಿರುವ ಕಟ್ಟಡವನ್ನು ಪುರಸಭಾ ಅಧಿನಿಯಮ 1964ರ ಪ್ರಕರಣ 108ರಂತೆ ಯಾಕೆ ಕ್ರಮ ಜರುಗಿಸಬಾರದು ಎಂಬುದಕ್ಕೆ ಈ ನೋಟೀಸು ತಲುಪಿದ 3 ದಿನಗಳೊಳಗೆ ಸೂಕ್ತ ಸಮಜಾಯಿಷಿಕೆಯನ್ನು ನೀಡಲು ತಿಳಿಸಿದೆ. ತಪ್ಪಿದ್ದಲ್ಲಿ ನಿಯಮಾನುಸಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜು.29 ರಂದು ಅಂತಿಮ ನೋಟಿಸ್ ಜಾರಿ ಮಾಡಲಾಗಿದೆ.

ಎರಡು ಇಲಾಖೆಗೆ ಪತ್ರ : ರಾಷ್ಟ್ರೀಯ ಹೆದ್ದಾರಿಯವರು ಮಾಡಿದ ತಡೆಗೋಡೆಯನ್ನು ಮೆಷಿನ್ ಮೂಲಕ ಕಟ್ಟಡ ಮಾಲೀಕರು ಹಾನಿಮಾಡಿದ್ದು ಮತ್ತು ರಸ್ತೆ ಮಾರ್ಜೀನ್ ನಲ್ಲಿ ಅಕ್ರಮವಾಗಿ ಕಬ್ಬಿಣ ಸೀಟ್ ಬಳಿಸಿ ಅಂಗಡಿಯನ್ನು ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮತ್ತು ಅನಧಿಕೃತ ಕಟ್ಟಡಕ್ಕೆ ಮುಂದಿನ ದಿನಗಳಲ್ಲಿ ಯಾವುದೇ ವಿದ್ಯುತ್ ಸಂಪರ್ಕವನ್ನು ನೀಡಿದಂತೆ ಬೆಳ್ತಂಗಡಿ ಮೆಸ್ಕಾಂ ಇಲಾಖೆಗೆ ಕೂಡ ಪತ್ರವನ್ನು ಕಳುಹಿಸಿಕೊಡಲಾಗಿದೆ.

Leave a Reply

Discover more from Nammura Suddi

Subscribe now to keep reading and get access to the full archive.

Continue reading