
ಬೆಳ್ತಂಗಡಿ: ಹಾಸನದ ಹಾಲಿ ಸಂಸದ, ಬಿಜೆಪಿ, ಜೆಡಿಎಸ್ ಮೈತ್ರಿ ಕೂಟದ ಲೋಕಸಭಾ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ನಡೆಸಿದ ಜಗತ್ತಿನ ಅತ್ಯಂತ ದೊಡ್ಡ ಲೈಂಗಿಕ ಹಗರಣದ ಬಗ್ಗೆ ತನಿಖೆಗಾಗಿ ರಾಜ್ಯ ಸರ್ಕಾರ ಎಸ್.ಐ.ಟಿ. ನೇಮಕ ಮಾಡಿರುವುದು ಸ್ವಾಗತರ್ಹ. ಭೇಟಿ ಬಚಾವೋ, ಭೇಟಿ ಪಡಾವೋ ಖ್ಯಾತಿಯ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮೌನವಹಿಸುವ ಮೂಲಕ ನಕಲಿತನ ಪ್ರದರ್ಶಿಸುತ್ತಿದ್ದಾರೆ.
ಮಹಿಳೆಯರನ್ನು ಮಾತೆ, ದೇವತೆ ಎಂದು ಹೇಳುವ ಬಿಜೆಪಿಗರು ಈ ಲೈಂಗಿಕ ದೌರ್ಜನ್ಯ, ಹಿಂಸೆಯ ವಿರುದ್ಧ ಮೌನ ವಹಿಸುವ ಮೂಲಕ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ವರ್ತಿಸುತ್ತಿದೆ. ಭೇಟಿ ಬಚಾವೋ, ಭೇಟಿ ಪಡಾವೋ ಎಂಬುದು ಕೇವಲ ಚುನಾವಣಾ ಗಿಮಿಕ್ ಎನ್ನುವುದು ಸಾಬೀತಾಗಿದೆ. ಹೆಣ್ಣು ಮಕ್ಕಳ ಬಗ್ಗೆ ಮತ್ತು ಧರ್ಮದ ಗುತ್ತಿಗೆ ಪಡೆದವರಂತೆ ವರ್ತಿಸುವ ಇವರ ಮೌನ ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸುವಂತಾಗಿದೆ. ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಗೌರವ ಹೊಂದಿರುವ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಈ ಲೈಂಗಿಕ ಹಗರಣದ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮುಂದಾಗಿದೆ. ದೇಶದ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಕುಟುಂಬದಲ್ಲಿ ಇಂತಹ ಕಾಮುಕರಿದ್ದಾರೆ ಎಂದು ಪೆನ್ ಡ್ರೈವ್ ಮೂಲಕ ಸಾಬೀತಾಗಿ ಜಗತ್ತಿನ ಮುಂದೆ ದಾರಿ ತಪ್ಪಿದವರಾರು ಎಂಬುದು ಬಯಲಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ವಿರುದ್ಧ ಮಾತನಾಡುತ್ತಾ ಕುಮಾರಸ್ವಾಮಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದವರು ಈಗ ತನ್ನ ಕುಟುಂಬದ ಕುಡಿಯ ಮೂಲಕ ದಾರಿ ತಪ್ಪಿದ್ದು ಹೆಣ್ಣು ಮಕ್ಕಳಲ್ಲ ಬದಲಾಗಿ ತನ್ನದೇ ಸ್ವಂತ ಅಣ್ಣನ ಮಗ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Discover more from Nammura Suddi
Subscribe to get the latest posts sent to your email.
