ಶಿಬಾಜೆ: ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಅರಂಪಾದೆ ಎಂಬಲ್ಲಿ ರಾತ್ರಿ ವೇಳೆ ಮನೆಗೆ ನುಗ್ಗಿ ಹಣ ತೆಗೆದುಕೊಂಡು, ಜೀವ ಬೆದರಿಕೆ ಹಾಕಿದ ಆರೋಪದಡಿ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಅರಂಪಾದೆ ನಿವಾಸಿ ಎಲಿಯಮ್ಮ ತೋಮಸ್ (60ವ) ರವರ ಮಾಹಿತಿಯಂತೆ ಜುಲೈ 10 ರಂದು ರಾತ್ರಿ ಸುಮಾರು 9.50 ಗಂಟೆಗೆ ಆರೋಪಿಗಳಾದ ಮನೋಜ್ ಎನ್. ಕೆ. ಹಾಗೂ ತುಂಬತಾಜೆಯ ರಾಜು ಅವರು KA-01-MU-2405 ಸಂಖ್ಯೆಯ ಕಾರಿನಲ್ಲಿ ದೂರುದಾರರ ಮನೆ ಬಳಿ ಬಂದು ಮನೆಯ ಹಂಚಿನ ಮೇಲೆ ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಲ್ಲಿ ತಲವಾರು ಹಿಡಿದು ಮನೆಯೊಳಗೆ ನುಗ್ಗಿದ ಆರೋಪಿಗಳು, ಮೇಜಿನ ಮೇಲಿದ್ದ 2,900 ರೂಪಾಯಿ ನಗದನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಇದನ್ನು ತಡೆಯಲು ಮುಂದಾದ ದೂರುದಾರರನ್ನು ತಳ್ಳಿಹಾಕಿ ಹಣವನ್ನು ಕೊಂಡೊಯ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ದೂರುದಾರರ ಮಗ ಪೊಲೀಸರಿಗೆ ಜೂಜಾಟ (ಲೂಡೋ) ಕುರಿತು ಮಾಹಿತಿ ನೀಡಿದ್ದಾನೆ ಎಂದು ಆರೋಪಿಸಿ, “ಕೊಲ್ಲದೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಘಟನೆಯ ವೇಳೆ ಆರೋಪಿಗಳು ಮದ್ಯದ ಅಮಲಿನಲ್ಲಿದ್ದರು ಎಂದು ಸಹ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಬಳಿಕ ಕಲಂ 329(3) r/w 3(5) BNS -2023 ರ ಅಡಿಯಲ್ಲಿ ಜು.22 ರಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Discover more from Nammura Suddi
Subscribe to get the latest posts sent to your email.
