ಬೆಳ್ತಂಗಡಿ: ಇಲಿಪಾಷಣ ಸೇವಿಸಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುದುವೆಟ್ಟಿನಲ್ಲಿ ನಡೆದಿದೆ
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಕಲ್ಲಾಜೆ ನಿವಾಸಿ ವೆಂಕಟೇಶ್ ಭಂಡಾರಿ ಮತ್ತು ಸುಮಿತ್ರಾ ದಂಪತಿಗಳ ಪುತ್ರಿ ಅನಿತಾ (17ವ) ಎಂಬವರು ಕಳೆದ ನಾಲ್ಕು ದಿನದ ಹಿಂದೆ ಎರಡು ಪ್ಯಾಕ್ ಇಲಿ ಪಾಷಣ ಸೇವಿಸಿ ತೀವ್ರ ಅಸ್ಪಸ್ಥಗೊಂಡಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ 3 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಅನಿತಾ ಜು.3ರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಇದು ಅನಾರೋಗ್ಯ ಮತ್ತು ಸೊಳ್ಳೆ ಉತ್ಪಾದನಾ ಕೇಂದ್ರ – ಈ ಶವಾಗಾರ ನೋಡಿದರೆ ಹೆಣವೂ ಎದ್ದು ಓಡುತ್ತದೆ

ಈಕೆ ಪ್ರಸ್ತುತ ಬೆಳ್ತಂಗಡಿ ಖಾಸಗಿ ಪದವಿಪೂರ್ವ ಕಾಲೆಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದು ಮನೆಯವರಿಗೆ ಕಷ್ಟ ಕೊಡಲು ನನ್ನಿಂದ ಆಗಲ್ಲ ಎಂದು ಡೆತ್ ನೋಟ್ ನಲ್ಲಿ ನಮೂದು ಮಾಡಿರುವುದಾಗಿ ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ಗೆಳತಿಯ ಹಾದಿಯನ್ನೇ ಹಿಡಿದ ಅನಿತಾ..!?:
ಈಕೆಯ ಗೆಳತಿ ಕಳೆದ ಆರು ತಿಂಗಳ ಹಿಂದೆ ಧರ್ಮಸ್ಥಳ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ತೃಷಾ (16) ಎಂಬಾಕೆ ಶಾಲೆಯ ಇಬ್ಬರು ಶಿಕ್ಷಕರಿಂದ ಅವಮಾನ ಅಗಿದ್ದರಿಂದ ಇಲಿಪಾಷಣ ತಿಂದು ಸಾವನ್ನಪ್ಪಿದ್ದಳು. ಆಕೆಯ ಸಾವಿನ ಬಳಿಕ ಅನಿತಾ ಕೂಡಾ ಮಾನಸಿಕವಾಗಿ ಕುಗ್ಗಿದ್ದಳು ಎಂದು ಆಕೆಯನ್ನು ಬಲ್ಲವರು ಹೇಳಿಕೊಳ್ಳುತ್ತಿದ್ದು, ಆತ್ಮೀಯ ಗೆಳತಿ ತೃಷಾ ಸಾವಿನಿಂದ ಮಾನಸಿಕವಾಗಿ ಅನಿತಾ ನೊಂದಿದ್ದಳಾ ಎನ್ನುವ ಪ್ರಶ್ನೆಯು ಮೂಡುತ್ತದೆ.