ಪದ್ಮುಂಜ: ಬಂದಾರು, ಮೊಗ್ರು, ಕಣಿಯೂರು ಗ್ರಾಮದ ಅಭಿನಂದನಾ ಸಮಿತಿ ವತಿಯಿಂದ ಖಾಸಗಿ ವಾಹಿನಿ ಕೊಡಮಾಡಿದ ಕರಾವಳಿ ಹಾಗೂ ಮದ್ಯ ಕರ್ನಾಟಕ ವಿಭಾಗದಲ್ಲಿ “ಉತ್ತಮ ಶಾಸಕ ಪ್ರಶಸ್ತಿ” ಪುರಸ್ಕೃತರಾದ ಶಾಸಕ ಹರೀಶ್ ಪೂಂಜಾರವರಿಗೆ 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಂದ ಗೌರವಾಭಿನಂದನೆ-2026 ಕಾರ್ಯಕ್ರಮ ಆ 23.ರಂದು ಪದ್ಮುಂಜ ಸಿ.ಎ. ಬ್ಯಾಂಕ್ ರೈತ ಸಭಾಭವನದಲ್ಲಿ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾರವರು, ನನಗೆ ನೀವು ಕೊಟ್ಟಂತಹ ಪ್ರೀತಿಯ ಸನ್ಮಾನವನ್ನು ಅತ್ಯಂತ ಪ್ರೀತಿ ಪೂರ್ವಕವಾಗಿ ಸ್ವೀಕರಿಸಿದ್ದೇನೆ. ಆದರೆ, ಈ ಸನ್ಮಾನ ನನಗಲ್ಲ, ಇದು ಬಂದಾರು, ಮೊಗ್ರು, ಕಣಿಯೂರು ಗ್ರಾಮದ ಗ್ರಾಮಸ್ಥರಿಗೆ ಅರ್ಪಿತವಾಗಿದೆ. ನಾನು ನಿಮ್ಮೆಲ್ಲರ ಆಶಿರ್ವಾದದಿಂದ ಶಾಸಕನಾದ ಬಳಿಕ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ನಮ್ಮ ತಾಲೂಕಿನಲ್ಲಿ 100 ವೆಂಟೆಡ್ ಡ್ಯಾಂಗಳನ್ನು ನಿರ್ಮಿಸುವ ಕನಸಿತ್ತು, ಇಂದು ಸುಮಾರು 84 ವೆಂಟೆಡ್ ಡ್ಯಾಂಗಳ ನಿರ್ಮಾಣವಾಗಿದೆ ಎಂದರು. ಸದ್ಯ, ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನಗಳು ಬರ್ತಾ ಇಲ್ಲ. ಆದರೂ, ನಾನು ನನ್ನ ತಾಲೂಕಿನ ಜನರಿಗಾಗಿ ಶ್ರಮಿಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ತಾಲೂಕಿನ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಸಾವಯವ ಕೃಷಿಕ, ಮೊಗ್ರು -ಕಡಮ್ಮಾಜೆ ಫಾರ್ಮ್ಸ್ ದೇವಿಪ್ರಸಾದ್ ಕೆ. ಗೌಡರವರು ಅಭಿನಂದನಾ ಭಾಷಣ ಮಾಡುತ್ತಾ, ನವ ಬೆಳ್ತಂಗಡಿ ನಿರ್ಮಾಣದ ಶಿಲ್ಪಿ ನಮ್ಮ ಶಾಸಕರು. ಇಡೀ ದೇಶವೇ ಇಂದು ಬೆಳ್ತಂಗಡಿಯತ್ತ ತಿರುಗಿ ನೋಡುವಂತೆ ಮಾಡಿದ್ದು, ನಮ್ಮ ಹೆಮ್ಮೆಯ ಶಾಸಕ ಹರೀಶ್ ಪೂಂಜಾರವರು. ಕಳೆದ 10-15 ವರ್ಷಗಳ ಹಿಂದೆ ನಮ್ಮ ಗ್ರಾಮೀಣ ಪ್ರದೇಶದ ಹುಡುಗಿಯನ್ನು ಬೇರೆ ಊರಿಗೆ ಮದುವೆ ಮಾಡಿಕೊಡಲು ಅಥವಾ ಬೇರೆ ಯುವಕರನ್ನು ಬೇರೆ ಊರಿಗೆ ಮದುವೆ ಮಾತುಕತೆ ನಡೆಸುವಾಗ ಅಲ್ಲಿನ ಜನರು, “ಆ ಕುಗ್ರಾಮಕ್ಕೆ ಕೊಡುವುದಿಲ್ಲ” ಎನ್ನುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ನಾವು ಎಲ್ಲೇ ಹೋಗಿ ಮದುವೆ ಮಾತುಕತೆ ನಡೆಸುವಾಗ ಸತ್ಕರಿಸಿ, ಗೌರವಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಶಾಸಕ ಹರೀಶ್ ಪೂಂಜಾರವರ ಅಭಿವೃದ್ಧಿ ಕಾರ್ಯಗಳು ಎಂದು ಹೇಳಿದರು.
ಗೌರವಾಭಿನಂದನೆ ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಾರುತಿಪುರ ರೈತಬಂಧು ಶಿವಶಂಕರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಮನೋಹರ ಗೌಡ ಅಂತರ ಮುಗೇರಡ್ಕ, ಚಂದ್ರಹಾಸ ಗೌಡ ದೇವಸ್ಯಗುತ್ತು ಮುಗೇರಡ್ಕ, ಮಾವಿನಕಟ್ಟೆ ಚರ್ಚ್ ಧರ್ಮಗುರುಗಳಾದ ಫಾ. ಕಾಶ್ಮೀರ್ ಡಿ’ಸೋಜಾ, ಸುದರ್ಶನ ಹೆಗ್ಡೆ ಕಣಿಯೂರು ಗುತ್ತು, ಪದ್ಮನಾಭ ಶಿಲ್ಪಿ ಪಿಲಿಗೂಡು, ಚಿದಾನಂದ ರಾವ್ ಕೊಲ್ಲಾಜೆ, ಬಾಬು ನಾಯ್ಕ ಮೈಪಾಜೆ ಕಣಿಯೂರು, ಕೇಶವ ಸಾಲ್ಯಾನ್ ಅಡೆಂಜ, ಪತ್ರಕರ್ತರಾದ ಅಚ್ಚುಶ್ರೀ ಬಾಂಗೇರು, ಜನಾರ್ಧನ ಪೂಜಾರಿ ಕಡ್ತಿಲ ಮೊಗ್ರು, ಆನಂದ ಗೌಡ ಮುಂಡೂರು ಮೈರೋಳ್ತಡ್ಕ, ಧರ್ನಪ್ಪ ಗೌಡ ಬಾನಡ್ಕ ಮೈರೋಳ್ತಡ್ಕ, ಧರ್ನಪ್ಪ ಗೌಡ ಕೋಡಿಯೇಲು, ತಿಮ್ಮಯ್ಯ ಗೌಡ ನಿವೃತ್ತ ಸಿಎ ಬ್ಯಾಂಕ್ ಮ್ಯಾನೇಜರ್ ಪದ್ಮುಂಜ ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕು. ಪೂರ್ವಿಕ ವಂದೇಮಾತರಂ ಹಾಡಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಮಹಾಬಲ ಗೌಡರವರು ಪ್ರಾಸ್ತಾವಿಕ ಮಾತುಗಳ ಮೂಲಕ ಸ್ವಾಗತಿಸಿದರು. ಮಾಧವ ಗೌಡರವರು ನಿರೂಪಣೆಗೈದು, ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಮಿಕ್ಕಿ ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಮುಖರಾದ ರಕ್ಷಿತ್ ಪಣೆಕ್ಕರ, ಬಾಲಕೃಷ್ಣ ಗೌಡ ಮುಗೇರಡ್ಕ, ಯತೀಶ್ ಶೆಟ್ಟಿ ಪಣೆಕ್ಕರ, ಗಿರೀಶ್ ಗೌಡ ಬಿ.ಕೆ. ಬಂದಾರು ಹಾಗೂ ಸಮಿತಿ ಪದಾಧಿಕಾರಿಗಳು, ಇನ್ನಿತರರು ಆಯೋಜನೆಗೆ ಸಹಕರಿಸಿದರು.

Discover more from Nammura Suddi
Subscribe to get the latest posts sent to your email.
