ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಗುತ್ತು ಎಂಬಲ್ಲಿ ಸರ್ಕಾರಿ ಜಾಗ ಸ.ನಂ. 142 ಮತ್ತು ದಿನೇಶ್ ಗೌಡ ಎಂಬವರ ಸ್ವಾಧೀನದ ಸ.ನಂ. 281/2ರಲ್ಲಿ ಅಕ್ರಮವಾಗಿ ವಿವಿಧ ಜಾತಿಯ 16 ಮರಗಳನ್ನು ಕಡಿದು ಅವುಗಳನ್ನು ದಿಮ್ಮಿ ಮತ್ತು ಕಟ್ಟಿಗೆಯಾಗಿ ಪರಿವರ್ತಿಸಿ ದಾಸ್ತಾನು ಇರಿಸಲಾಗಿದ್ದ ಮತ್ತು ಮರದ ದಿಮ್ಮಿಗಳನ್ನು ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿರುವುದನ್ನು ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಜು.18 ರಂದು ದಾಳಿ ಮಾಡಿ ಪತ್ತೆ ಹಚ್ಚಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಒಟ್ಟು 51 ದಬ್ಬು 15.655 ಘನ ಮೀ. ಮರದ ದಿಮ್ಮಿಗಳು ಹಾಗೂ 3.000 ಘನ ಮೀ. ಕಟ್ಟಿಗೆ ಹಾಗೂ ಸಾಗಾಟಕ್ಕೆ ಬಳಸಲಾಗಿದ್ದ KA 18 A 1360 ನೋಂದಣಿ ಸಂಖ್ಯೆಯ ಲಾರಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಮರದ ದಿಮ್ಮಿಗಳು, ಕಟ್ಟಿಗೆ ಹಾಗೂ ಲಾರಿಯ ಒಟ್ಟು ಅಂದಾಜು ಮೌಲ್ಯ 6,30,000 ರೂ ಅಗಿರುತ್ತದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ನಿವಾಸಿ ನಾರಾಯಣ ಗೌಡ ಪುತ್ರ ದಿನೇಶ್ ಗೌಡ (41ವ) ಹಾಗೂ ಲಾರಿ ಚಾಲಕ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ನಿವಾಸಿ ಶಹದ್ದುನ್ನಿ ಮೊಹಮ್ಮದ್ ಜಿ (27ವ) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಕೃತ್ಯವು ಕರ್ನಾಟಕ ಅರಣ್ಯ ಕಾಯ್ದೆ, 1963ರ ಕಲಂ 33(2)(V), 71A, ಕರ್ನಾಟಕ ಅರಣ್ಯ ನಿಯಮಗಳು, 1969ರ ನಿಯಮ 25(3) ಹಾಗೂ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ, 1976ರ ಕಲಂ 8(1)ರ ಉಲ್ಲಂಘನೆಯಾಗಿರುವುದರಿಂದ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮಹೇಶ್ ಎಂ. ದೇವಾಡಿಗ, ಉಪ ಅರಣ್ಯಾಧಿಕಾರಿ ರವಿಚಂದ್ರ ಮತ್ತು ನಾಗೇಶ್, ಗಸ್ತು ಅರಣ್ಯ ಪಾಲಕ ರವಿ ಜಟ್ಟಿ, ಪರಶುರಾಮ, ವಿರೇಶ್, ಪ್ರತಾಪ್ ಕುಮಾರ್, ಚಾಲಕ ಕುಶಲ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Leave a Reply

Discover more from Nammura Suddi

Subscribe now to keep reading and get access to the full archive.

Continue reading