ಬೆಳ್ತಂಗಡಿ : ಗುರುವಾಯನಕೆರೆಯಲ್ಲಿ ಅನುಮಾನಸ್ಪದವಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆಗೆ ಇದೀಗ ಟ್ವಿಸ್ಟ್ ದೊರಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಆಲಾದಿಕೊಟ್ಟಿಗೆ ಬಳಿಯಿರುವ ಶ್ರೀ ದೇವಿ ಕಾಂಪ್ಲೆಕ್ಸ್ ಆವರಣದಲ್ಲಿ ಜೂನ್ 1 ರಂದು ಬೆಳಗ್ಗೆ ಅಂದಾಜು 7 ಗಂಟೆ ಸುಮಾರಿಗೆ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ತೋಟದ ಮನೆ ನಿವಾಸಿ ಯತೀಶ್ (33ವ) ಎಂಬಾತನ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆಯು ಬೆಳಕಿಗೆ ಬಂದಿದ್ದು, ಬೆಳ್ತಂಗಡಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು.

ಈ ಕುರಿತು ವರದಿಗಳು ಪ್ರಕಟಗೊಂಡ ಬೆನ್ನಲ್ಲೆ ಇದನ್ನು ಗಮನಿಸಿದ ಮೃತರ ಸಹೋದರ ಬಂಟ್ವಾಳ ಪೆರ್ನೆ ನಿವಾಸಿ ನಿತಿನ್ (34ವ) ಎಂಬವರು ಮೃತರ ಬಾವಚಿತ್ರವನ್ನು ಪರಿಶೀಲಿಸಿದಾದ ಮೃತ ವ್ಯಕ್ತಿಯು ತನ್ನ ಸಹೋದರ ಎಂಬುದನ್ನು ಗುರುತಿಸಿದ್ದು, ಘಟನಾ ಸ್ಥಳಕ್ಕೆ ಬಂದು ಸ್ಥಳದಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸಿದಾಗ ಜೂ. 1ರಂದು ಬೆಳಗ್ಗಿನ ಸಮಯ ತನ್ನ ಸಹೋದನಿಗೆ ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35ವ), ಕಡಬ ಚಾರ್ವಾಕ ನಿವಾಸಿ ಮೋಹನ್ (30ವ) ಹಾಗೂ ಬೆಳ್ತಂಗಡಿ ಪಡಂಗಡಿ ನಿವಾಸಿ ಇಬ್ರಾಹಿಂ (54ವ) ಎಂಬವರುಗಳು ಹಲ್ಲೆ ಮಾಡುತ್ತಿರುವುದು ಕಂಡುಬಂದಿದ್ದು, ಆರೋಪಿಗಳ ಹಲ್ಲೆಯಿಂದಾಗಿ ಸದ್ರಿ ಯತೀಶನು ಮೃತಪಟ್ಟಿರುವುದಾಗಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿರುತ್ತಾರೆ.
ಮೃತರ ಸಹೋದರ ನಿತಿನ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ : 65/2026, ಕಲಂ: 115(2) 103 ಜೊತೆಗೆ 3(5) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

